
11th June 2025
ಬೆಳಗಾವಿ: ತಾಲೂಕಿನ ಅಂಬೇವಾಡಿ ಗ್ರಾಮದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಕೆಎಲ್ಇ ಕೆವಿಕೆ ಮತ್ತಿಕೊಪ್ಪ, ಕೃಷಿ ಇಲಾಖೆ, ಇಫ್ಕೋ ಗೊಬ್ಬರ ಸಂಸ್ಥೆ ಮತ್ತು ಸ್ಥಳೀಯ ಗ್ರಾಮ ಪಂಚಾಯತಿ ಆಶ್ರಯದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮ ಏರ್ಪಡಿಸಿದ್ದು, ರೈತರನ್ನು ಉದ್ಧೇಶಿಸಿ ಕೆಎಲ್ಇ ಸಂಸ್ಥೆಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಮಂಜುನಾಥ ಚೌರಡ್ಡಿ ಮಾತನಾಡುತ್ತಿದ್ದರು. ಅಂಬೇವಾಡಿ ಗ್ರಾಮದ ಸುತ್ತಮುತ್ತ ಕಬ್ಬು ಬೆಳೆಗಾರರು ಹೆಚ್ಚಾಗಿದ್ದು, ಕಡಿಮೆ ಇಳುವರಿ ಪಡೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಿಓ-೯೨೦೦೫ ಕಬ್ಬಿನ ತಳಿಯ ಸುಧಾರಿತ ಅಂಗಾಂಶ ಕೃಷಿಯ ಸಸಿಗಳನ್ನು ಬಳಕೆ ಮಾಡಿದಲ್ಲಿ ಇಳುವರಿ ಹೆಚ್ಚಿಸಲು ಸಾಧ್ಯವಿದೆ ಎಂದರು. ರೈತರು ಬೆಳೆಯುತ್ತಿರುವ ಕಬ್ಬಿಗೆ ತುಕ್ಕು ರೋಗದ ಬಾಧೆ ಹೆಚ್ಚಾಗಿ ಕಂಡು ಬರುತ್ತಿದೆ. ವಾರ್ಷಿಕ ಮಳೆಯ ಪ್ರಮಾಣವು ಹೆಚ್ಚಾಗಿರುವುದರಿಂದ ಅಗಲ ಸಾಲು ಪದ್ಧತಿಯಲ್ಲಿ ಸಾಲಿನಿಂದ ಸಾಲಿಗೆ ಐದು ಅಡಿ ಅಂತರವಿಟ್ಟು ಲಾವಣಿ ಮಾಡಿದಲ್ಲಿ ಬೆಳೆಗೆ ಸಾಕಷ್ಟು ಪ್ರಮಾಣದಲ್ಲಿ ಗಾಳಿ, ಬೆಳಕು ಸಿಕ್ಕು ಲಭ್ಯವಿರುವ ಪೋಷಕಾಂಶ ಬಳಸಿಕೊಂಡು ಬೆಳೆ ಇಳುವರಿ ಸುಧಾರಿಸಲಿದೆ. ನಾಟಿ ಮಾಡುವಾಗ ಕ್ಲೋರ್ಪೈರಿಫಾಸ್, ಯೂರಿಯಾ, ಕಾರ್ಬನ್ಡೈಜಿಮ್ ಇವೆ ಮೊದಲಾದ ರಾಸಾಯನಿಕಗಳನ್ನು ಬಳಸಿ ಬೀಜೋಪಚಾರ ಮಾಡುವುದು ಸೂಕ್ತ ಎಂದು ಅಭಿಪ್ರಾಯಿಸಲಾಯಿತು. ಅತೀ ಮಳೆಯಿಂದ ಕಳೆ ಬಾಧೆ ಹೆಚ್ಚಾಗಿದ್ದು, ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸಿ ಉದಯಪೂರ್ವ ಕಳೆನಾಶಕಗಳನ್ನು ಬಳಸಿ ನಿರ್ವಹಣಾ ವೆಚ್ಚವನ್ನು ತಗ್ಗಿಸಲು ತಿಳಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಮತಿ ಸುವರ್ಣಾ ಲೋಹಾರ ಇವರು ಉಪಸ್ಥಿತರಿದ್ದು, ರೈತರೊಡನೆ ಹಾಗೂ ತಜ್ಞರೊಡನೆ ಸಂವಾದಿಸಿದರು. ಇದುವರೆಗೂ ನಮ್ಮ ಗ್ರಾಮಕ್ಕೆ ಈ ರೀತಿ ಕೃಷಿ ತಜ್ಞರು ಬಂದಿರಲಿಲ್ಲ. ಆದುದರಿಂದ ಇನ್ನು ಮುಂದೆ ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರದೊಡನೆ ಸಂಪರ್ಕವಿಟ್ಟುಕೊಂಡು ಕೃಷಿ ತಾಂತ್ರಿಕ ಮಾಹಿತಿ ಪಡೆಯಲು ಯತ್ನಿಸುವುದಾಗಿ ವಿವರಿಸಿದರು. ಭಾರತೀಯ ಕೃಷಿ ಅನುಸಂಧಾನ ಪರಿಷತ್ನ ಸಿಫಾ ಸಂಸ್ಥೆಯಿAದ ಬಂದಿರುವ ಡಾ. ಆನಂದಕುಮಾರ ಇವರು ಭತ್ತದಲ್ಲಿ ಅಜೋಲ್ಲಾ ಬೆಳೆಯುವ ಬಗ್ಗೆ ಹಾಗೂ ಮೀನು ಸಾಕಾಣೆ ಮಾಡುವ ಕುರಿತು ರೈತರಿಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಪುಲಕೇಶಿ ದಾನಿ, ಕೃಷಿ ಅಧಿಕಾರಿ ಇವರು ಇಲಾಖೆಯ ವಿವಿಧ ಯೋಜನೆಗಳನ್ನು ವಿವರಿಸಿ, ರೈತರು ಇದರ ಸದುಪಯೋಗ ಪಡೆಯಲು ವಿನಂತಿಸಿದರು. ಆತ್ಮ ಯೋಜನೆಯ ಮಲೀಕ್ ನಾಯಿಕ, ಕೆವಿಕೆಯಿಂದ ತರಬೇತಿ ಪಡೆದ ಕೃಷಿ ಸಖಿ ಶ್ರೀಮತಿ ರಾಜಶ್ರೀ ಜೈನ ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಸಾಂಗೋಪವಾಗಿ ನಡೆಸಿಕೊಟ್ಟರು. ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ತಜ್ಞ ಪ್ರವೀಣ ಯಡಹಳ್ಳಿ ಇವರು ಬೆಳಗಾವಿ ಜಿಲ್ಲೆಯಲ್ಲಿ ತರಕಾರಿ ಬೆಳೆಗೆ ಇರುವ ಬೇಡಿಕೆ ಮತ್ತು ಪೂರೈಕೆ ಕುರಿತು ಹಾಗೂ ವಿವಿಧ ತರಕಾರಿ ಬೆಳೆಗಳ ಬೇಸಾಯ ಕ್ರಮಗಳನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಬೀಜೋಪಚಾರ ಮಾಡುವ ಪ್ರಾತ್ಯಕ್ಷಿಕೆ ಹಾಗೂ ಜೈವಿಕ ಕೀಟನಾಶಕ ಮತ್ತು ಶಿಲೀಂದ್ರನಾಶಕಗಳ ಬಳಕೆ ಕುರಿತು ವಿವರ ಮಾಹಿತಿ ನೀಡಲಾಯಿತು. ಪ್ರವೀಣ ಯಡಹಳ್ಳಿ ಇವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವು ಸಂಪನ್ನವಾಯಿತು.
ವರದಿ:
ಸಾಗರ ಮೆಣಸಿನಕಾಯಿ